Labels

Tuesday 14 January 2020

ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು vaikuntapati taanu vaikunta bittu

ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ |
ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ ||೧||
ಚೋಳಭೃತ್ಯನು ಶಿರವನೊಡೆದ ಗಾಯವ ನೋಡಿ ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ | ಹೇಳಿದೌಷದಮಾಡಿ ಕ್ರೋಢರೂಪಿಯ ಕಂಡು ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ ||೨||
ಇರುತಿರಲು ಒಂದಿನ ತುರಗವನೆ ಸ್ಮರಿಸುತಲಿ ತುರಗ ಬರಲು ಕಂಡು ಮುದದಿ ತಾನೇರಿ |
ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು ಕರುಣಾಸಾಗರ ಒಂದು ವನವ ಕಂಡನು ||೩||
ವನದಲ್ಲಿ ವನಜಾಕ್ಷಿ ರಾಜಪುರ್ತಿಯ ಕಂಡು ಮನಕೆ ಬಂದಂತಾಡಿ ಕಲಹ ಮಾಡಿದರು |
ಮನಸಿಜ ತಾನು ಅಶ್ವವ ಕಳಕೊಂಡು ಘನವಾದ ಗಿರಿ ಏರಿ ಮಲಗಿದ ಹರಿಯು ||೪||
ನಗಧರ ಮಲಗಲು ಬಕುಳಾವತಿಯು ಆಗ ಬಗೆ ಬಗೆ ಕೇಳಲು ಶೋಕದಿಂ ನುಡಿದ |
ಗಗರಾಜನ ಪುತ್ರಿ ಪದ್ಮಾವತಿಯ ಕಂಡು ಹಗಲು ಇರಳು ಆಕೆ ಮುಖವ ಸ್ಮರಿಸುವನು ||೫||
ಅವಳಿಗೋಸುಗವಾಗಿ ಇದ್ದಲ್ಲಿಗೆ ಹೋದೆ ಅವಳಿಂದ ಎನ್ನಶ್ವ ಹತವಾಯಿತಮ್ಮ |
ಅವಳ ಹೊರೆತು ಎನ್ನ ಪ್ರಾಣವೇ ನಿಲ್ಲದು ಅವಳ ಘಟನೆಯ ನೀನು ಮಾಡಬೇಕಮ್ಮ ||೬||
ಅಂದ ಮಾತನು ಕೇಳಿ ಬಕುಳಾವತಿಯು ಆಗ ಆನಂದದಿಂ ರಾಜಪುರಕೆ ತೆರಳಿದಳು |
ಸುಂದರಿಯರ ಕಾರ್ಯ ಸ್ಥಿರವಾಗದೆಂದು ಚೆಂದುಳ್ಳ ಸ್ತ್ರೀರೂಪ ಧರಿಸಿದನು ಹರಿಯು ||೭||
ಕೊರವಂಜಿ ತಾನಾಗಿ ನೃಪನ ಪುರಕೆ ಹೋಗಿ ಧರಣಿದೇವಿಯ ಮುಂದೆ ಶಕುನ ಹೇಳಿದನು |
ತಿರುಗಿ ಬರಲಾತಗೆ ಮಗಳ ಕೊಡುವೆನೆಂದು ಹರಿಗೆ ನಿಶ್ಚಯಮಾಡಿ ಶಂಕರ ಕಳುಹಿಸಿದನು ||೮||
ತಾಪಸೋತ್ತಮ ಬಂದು ಪತ್ರವನೆ ಕೊಡಲು ಶ್ರೀಪತಿಯು ತಾನೋದಿ ಬೆನ್ಹಿಂದೆ ಬರೆದ |
ಆ ಪರಮ ವಂದ್ಯ ತಾ ಸುರಸ್ತೋಮವನೆ ಕರೆಸಿ ಈ ಪರಿ ವೈಭೋಗ ಮಾಡಿದ ಹರಿಯು ||೯||
ಆ ಕ್ಷಣದಲಿ ತಾನು ತರಣಿಯನ ಕರೆಸಿ ಇಕ್ಷುಚಾಪನ ಮಾತೆ ಬಳಿಗೆ ಪೋಗೆಂದ |
ತಕ್ಷಣದಲಿ ಸೂರ್ಯ ಹೋಗಿ ನಿಲ್ಲಲು ಹರಿಯ ಆಕ್ಷೇಮವನೆ ಕೇಳಿ ತೆರಳಿದಳು ಬೇಗ ||೧೦||
ಬಂದ ಸತಿಯಳ ಕೂಡಿ ಮಂದಿರಕೆ ಪೋಗಿ ಹಿಂದೆ ಹೇಳಿದ ವಾಕ್ಯ ನಡೆಸೆಂದ ಹರಿಯು |
ಸಂದೇಹವಿಲ್ಲದೇ ಸ್ವಾಮಿ ನಡೆಸೆಂದು ಇಂದಿರಾದೇವಿಯು ನುಡಿದಳು ಹರಿಗೆ ||೧೧||
ಸ್ವಸ್ತಿವಾಚನ ಮಾಡಿ ಕುಲದೇವರನಿಟ್ಟು ಪ್ರಸ್ಥವ ಮಾಡಿದ ದ್ವಿಜರ ಸ್ತೋಮಕ್ಕೆ |
ಮರುದಿನ ಲಕ್ಷ್ಮೀಶ ರಾಜನ ಆ ಪುರಕೆ ಸುರಸ್ತೋಮವನೆ ಕೂಡಿ ತೆರಳಿ ಬಂದ ||೧೨ ||
ಬರುವ ಕೃಷ್ಣನ ಕಂಡು ಶುಕಮುನಿ ಸಂಸ್ತುತಿಸಿ ಹರಿಗೆ ಭೋಜನವನ್ನು ಮುದದಿ ಮಾಡಿಸಿದ |
ಆಕಳಂಕ ಮಹಿಮನು ಬಂದ ವಾರ್ತೆಯ ಕೇಳಿ ಸಕಲ ಜನರ ಕೂಡಿ ಕರೆಯೆ ರಾಜ ||೧೩||
ಮುದದಿಂದ ಎದುರುಗೊಂಡು ಪರಿಮಳ ಪೂಸಿ ಸದಮಲ ಹೃದಯನ ಕರೆತಂದರು ಮನೆಗೆ | ಪದ್ಮನಾಭನ ಪೀಠದಲಿ ಕುಳ್ಳಿರಿಸಿ ಮಧುರ ಮಾತಿಲಿ ತನ್ನ ತರುಣಿ ಒಡಗೂಡಿ ||೧೪||
ಹೇನ ಕುಂಭಗಳಿಂದ ದ್ವಿಜರ ಕೈಯೊಳು ಸ್ವಾಮಿಪುಷ್ಕರಣಿ ತೋಯವನ್ನೇ ತರಿಸಿ |
ಹೇಮತಟ್ಟೆಯಲ್ಲಿ ಸ್ವಾಮಿ ಪಾದವನ್ನಿಟ್ಟು ಪ್ರೇಮದಿಂದಭಿಷೇಕ ಮಾಡಿದನು ರಾಜ ||೧೫||
ಚಿನ್ನದ ಕಿರೀಟ ಆಭರಣವನ್ನಿಟ್ಟು ಕನ್ಯಾದಾನವ ಮಾಡಿ ಧನ್ಯನಾದ |
ತನ್ನ ಮಗಳನೆ ಶ್ರೀನಿವಸಗೆ ಒಪ್ಪಿಸಿ ಉನ್ನತ ಪದವಿಯಂ ಚೆನ್ನಾಗಿ ಪಡೆದ ||೧೬||
ಮಾವನಪ್ಪಣೆನೊಂಡು ಮೈದಗೊಸ್ತ್ರವ ಕೊಟ್ಟು ಭಾವಶುದ್ದದಿ ತನ್ನ ಮಾವಗೊಂದಿಸಿದ |
ಯಾವಾಗ ಕರೆದರೂ ಬರುವೆನು ನಾನೆಂದು ಪಾವನ್ನ ಮಾಡೆಂದು ಧರಣೀಗೊಂದಿಸಿದ ||೧೭||
ಅಷ್ಟಗೋಪುರ ಏರಿ ಕಣ್ಣಿಟ್ಟು ನೋಡುತಲಿ ಎಷ್ಟು ಹೇಳಲಿ ಈಕೆ ಸುಕೃತಫಲವೆಂತೋ |
ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ ಸುಜನರಂದಣವೇರಿ ಪುರಕೆ ಸಾಗಿದರು ||೧೮||
ಆರು ತಿಂಗಳು ಮೀರಿ ಗಿರಿಗೆ ಪೋಗುವೆನೆಂದು ಧೀರ ತಾ ನಿಂತಾನೆ ಕುಂಭಜರಾಶ್ರಮದಿ |
ಧರೆಯೊಳು ಅಣಕೇರಿ ಸುರಪತಿ ಪ್ರಿಯನಾದ ಸುಗುಣವೇಂಕಟರನ್ನ ಪುರಂದರವಿಠಲ ||೧೯||

No comments:

Post a Comment