Labels

Saturday 25 January 2020

ಸಿರಿರಮಣ ತವ ಚರÀಣ siri ramana tava



ಸಿರಿರಮಣ ತವ ಚರÀಣ ಸೇವೆ ದೊರಕುವುದು ಹ್ಯಾಂಗಿನ್ನು
ಪರಮ ಪಾಪಿಷ್ಠ ನಾನು ಪ
ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ
ನರಕಕ್ಕೆ ಗುರಿಯಾದೆನೋ ಹರಿಯೆ ಅ.ಪ.
ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ
ಕೊಸರಿ ಹಾಕುತ ದಬ್ಬುತ
ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ
ವಶವಾಗಿ ಅವಳೊಲಿಸುತ
ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ
ಅಶನವೆರಡ್ಹೊತ್ತುಣ್ಣುತ
ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು
ಕುಸುಮ ಗಂಧಿಯ ರಮಿಸುತ ಸತತ 1
ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ
ಹಿರಿದಾಗಿ ಮನೆ ಕಟ್ಟದೆ
ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು
ಧರಧರದಿ ಬಿಚ್ಚಿ ತೆಗೆದೆ
ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ
ಕೊರೆಸಿ ಬಾಗಿಲು ಮಾಡಿದೆ
ಏಕ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ
ಪರಿಪರಿಯ ಸುಖ ಸಾರಿದೇ ಮೆರೆದೆ 2
ಸಾಕಲ್ಯದಿಂದ ಸಾಲಿಗ್ರಾಮದ ಅಭಿಷೇಕ
ಆಕಳ ಹಾಲಲಿ ಮಾಡದೆ
ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ
ಬೇಕೆಂದು ಹಾಲು ಹೊಯ್ದೆ
ಕಾಕು ಬುದ್ಧಿಗಳಿಂದ ಗುಡಿ ಗುಡಿ ನಸಿ ಪುಡಿ
ಹಾಕಿ ಭಂಗಿಯಾ ಸೇದಿದೆ
ಲೋಕ ನಿಂದಕ ನಾಗಿ ಪಾಪಕ್ಕೆ ಕೈ ಹಚ್ಚಿ ಅ
ನೇಕ ಜೂಜುಗಳಾಡಿದೇ ಬಿಡದೆ 3
ಸ್ನಾನ ಸಂಧ್ಯಾನ ಅತಿಮೌನ ಗಾಯಿತ್ರಿ ಜಪ
ಭಾನುಗಘ್ರ್ಯವನು ಕೊಡದೆ
ಹೀನತ್ವ ವಹಿಸಿ ದಾನ ಧರ್ಮವ ಮಾಡದೆ
ಶ್ವಾನನಂದದಿ ಚರಿಸಿದೇ
ಶ್ರೀನಿವಾಸನೆ ನಿನ್ನ ಅನುಪೂರ್ವಕ ಪೂಜೆ
ನಾನೊಂದು ಕ್ಷಣಮಾಡದೇ
ಬೇನೆ ಬಂದಂತಾಗೆ ಹೀನ ಸಕೇಶಿಯ ಕೈಲೆ
ನಾನ ವಿಧಾನ್ನ ತಿಂದೇ ನೊಂದೇ 4
ಬಾದರಾಯಣ ಕೃತ ಭಾಗವತ ಕೇಳಲಿಕೆ
ಆದರವೆ ಪುಟ್ಟಲಿಲ್ಲಾ
ವಾದಿಗಳ ಮತವಳಿದ ಮಧ್ವ ಸಿದ್ಧಾಂತದ
ಹಾದಿಗೆ ಹೋಗಲಿಲ್ಲ
ಶೋಧಿಸಿದ ಚಿನ್ನಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ
ವೇದ ಬಾಹಿರನಾಗಿ ಅಪಸವ್ಯ ಮನನಾಗಿ
ಓದಿಕೊಂಡೆನೋ ಇದೆಲ್ಲ ಸುಳ್ಳ 5
ಉತ್ತಮ ಬ್ರಾಹ್ಮಣರ ವೃತ್ತಿಗಳನೆ ತೆಗಸಿ ಬ್ರ
ಹ್ಮಹತ್ಯಗಾರನು ಎನಿಸಿದೆ
ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ
ಸತ್ತ ಸುದ್ದಿಯ ಪೇಳಿದೆ
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ
ಕುತ್ತಿಗೆಯ ನಾ ಕೊಯ್ಸಿದೆ
ಹತ್ತು ಜನರೆನ್ಹೆಣಕೆ ನಿತ್ಯ ಕಲ್ಲೊಡೆಯುತಿರೆ
ಮೃತ್ಯು ದೇವತೆಯೆನಿಸಿದೆ ಬಿಡದೇ 6
ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವವರೆನಗೆ
ಗತಿಯೇನು ಪೇಳೊ ಕೊನೆಗೆ
ಸತತ ತವ ಧ್ಯಾನದಲಿ ರತನಾಗಿ ಇರುವ ಸ
ನ್ಮತಿಯ ಪಾಲಿಸಯ್ಯ ಎನಗೆ
ಪತಿತಪಾವನನೆಂಬ ಬಿರಿದು ಅವನಿಯ ಮೇಲೆ
ಶ್ರುತಿ ಸಾರುತಿದೆಯೋ ಹೀಗೆ
ಶಿತಕಂಠನುತ ಜಗನ್ನಾಥವಿಠ್ಠಲ ನಿನಗೆ
ನುತಿಸದೆ ಬೆಂಡಾದೆ ಕಾಯೋ ಹರಿಯೆ 7


No comments:

Post a Comment