Labels

Tuesday 14 January 2020

ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ tirupati venkata ramana

ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೊ ಕರುಣ
ಅಳಗಿರಿಯಿಂದಲಿ ಬಂದಾ ಸ್ವಾಮಿ ಅಂಜನಗಿರಿಯಲಿ ನಿಂದ
ಕೊಳಲೂದೊ ಧ್ವನಿ ಚಂದಾ ನಮ್ಮ ಕುಂಡಲರಾಯ ಮುಕುಂದ
ಬೇಟೆಯಾಡುತ ಬಂದಾ ಸ್ವಾಮಿ ಬೆಟ್ಟದ ಮೇಲೆ ನಿಂದಾ
ನೀಟುಗಾರ ಗೋವಿಂದಾ ಅಲ್ಲಿ ಜೇನು ಸಕ್ಕರೆಯನು ತಿಂದಾ
ಮೂಡಲಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತಾ ಈರೇಳು ಲೋಕಕನಂತ
ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ
ಅಪ್ಪವ ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯರ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ
ಬಗೆಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯಾನ್ನ
ಬಗೆಬಗೆ ಸೊಬಗು ಮೋಹನ್ನ ನಮ್ಮ ನಗೆಮುಖದ ಪ್ರಸನ್ನ
ಕಾಶೀ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದೆ ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೇ ಚೆಂದ
ಎಲ್ಲ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದರಿಗೆ ಉದ್ದಂಡ ಶಿವನ ಬಿಲ್ಲ ಮುರಿದ ಪ್ರಚಂಡ
ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ
ದಾಸರ ಕಂಡರೆ ಪ್ರಾಣ ತಾ ಧರೆಯೊಳಗಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯಕಲ್ಯಾಣ
ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕೈಯ
ಏಸು ಮಹಿಮಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ
ಚಿತ್ತವಧಾನ ಪರಾಕು ನಿನ್ನ ಚಿತ್ತದ ದಯವೊಂದೆ ಸಾಕು
ಸತ್ವವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು
ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಂಪು
ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ
ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೇ ಪಾನ
ಕೋಪತಾಪಗಳ ನಿಧಾನ ನಮ್ಮ ಪುರಂದರವಿಠಲನ ಧ್ಯಾನ

No comments:

Post a Comment