Labels

Sunday 29 March 2020

ಏನಾಯಿತೀ ಜನಕೆ ಮೌನವದು ಕವಿದಂತೆ |


ಏನಾಯಿತೀ ಜನಕೆ ಮೌನವದು ಕವಿದಂತೆ |
ಮಾನುಷ್ಯರಾಗಿ ಮರೆತರು ಹರಿಯನು ಪ.
ನಾಲಗೆಗೆ ಮುರಿಯಿತೆ ನೆಗ್ಗಿಲ ಕೊನೆಮುಳ್ಳು |
ಬಾಲತನದಲಿ ಭೂತ ಹೊಡೆಯಿತೆ - ಕೆಳಗು - |
ಮೇಲಿನ ತುಟಿ ಎರಡು ಒಂದಾಯಿತೇ - ಅವರ - |
ಕಾಲಮೃತ್ಯು ಬಂದು ಕಂಗೆಡಿಸಿತೆ ? 1
ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೆ |
ಕಟಗರಿಸಿ ನಾಲಗೆ ಕಡಿದು ಹೋಯಿತೆ ? ||
ಹಟ ಹಿಡಿದ ಹೊಲೆಮನಸು ಹರಿ ಎನ್ನಲಾರದೆ |
ಕುಟಿಲ ಚಂಚಲ ಬುಧ್ಧಿ ಕಂಗೆಡಿಸಿತೆ ? 2
ಹರಿಯೆಂದರವರ ಶಿರ ಹರಿದು ಬೀಳುವುದೆ |
ಪರಬ್ರಹ್ಮ ಪಣೆಯಲ್ಲಿ ಬರೆದಿಲ್ಲವೆ ||
ಸಿರಿದೇವಿಗೊಲಿದ ಶ್ರೀ ಪುರಂದರವಿಠಲನ |
ಸ್ಮರಿಸಿದರೆ ಸಿಡಿಲೆರಗಿ ಸುಟ್ಟು ಕೊಲ್ಲುವುದೆ ? 3


No comments:

Post a Comment