Labels

Tuesday 31 March 2020

ಕೇಳೆ ಗೋಪಿ ಗೋಪಾಲ ಮಾಡಿದ ಬಲು


ಕೇಳೆ ಗೋಪಿ ಗೋಪಾಲ ಮಾಡಿದ ಬಲು |
ದಾಳಿಯ ಗೋಕುಲದಿ ಪ
ತಾಳೆಲಾರೆವೆ ತವಕದಲಿ ಕಂದಗೆ ಬುದ್ಧಿ |
ಹೇಳೆ ಕೃಷ್ಣವ ಕರೆದು ಅ.ಪ
ಸರಿರಾತ್ರಿಯೊಳು ಸರಸರನೆ ಮನೆಗೆ ಬಂದು |
ಸುರಿದು ಪಾಲ್ಪೆಣ್ಣೆಗಳ ||
ಉರೋಜಗಳಿಗೆ ಕರ ಸರಿಸಿ ಕಣ್ಗಳನು |
ತೆರೆದು ನೋಡುವನೆ ನಮ್ಮ 1
ಗಂಡನು ಮನೆಯೊಳಗಿರಲು ಬಂದು ಕೃಷ್ಣ |
ಭಂಡ ಮಾತುಗಳ ಬಹು ||
ತುಂಟತನದಲಾಡಿ ಉದ್ದಂಡ ಕಠಿಣಕಾಯ |
ದುಂಡುಕುಚವ ಪಿಡಿದ 2
_______ವದ ಮೇಲಿರಲು ತಾ |
ಸೀರೆಯ ಸೆಳೆವ ನೋಡೆ ||
ಆರಿವರೆಂದು ವಿಚಾರಿಸಿ ನೋಡಲು |
ಮೋರೆಯ ಬಾಗಿದನೆ 3
ಕೇರಿಯೊಳಗೆ ದಧಿ ಮಾರುತಿರಲು ಕೃಷ್ಣ |
ಸಾರಿ ಬಂದು ಮೊಸರ ||
ಸೂರೆಗೊಂಡು ಪರನಾರಿಯರ ನೆರೆದು ತಾ |
ಘೋರರೂಪದಿ ಮೆರೆದ 4
ಆಡಲೇತಕೆ ನಮ್ಮ ಬಾಗಿಲಂಗಳದೊಳು |
ಬೇಡುವ ಜಲ ದೈನ್ಯದಿ ||
ನೀಡುವೆ ಜಲ ಜಲಜಾಕ್ಷ ಬಾಬಾ ಎನೆ |
ಮಾಡುವ ರತಿ ಎಂಬನೆ 5
ಹುಡುಗನೆಂದು ಕೈಯ ಪಿಡಿಯ ಪೋಗಲು ನಮ್ಮ |
ಉಡೆಮುಡಿ ಪಿಡಿದ ನೋಡೆ ||
ಪಡೆದವಳಿಗೆ ಪೇಳುವೆ ನಡೆ ಎನೆ ಮಚ್ಚ |
ಕೊಡಲಿ ತೋರುವನೆ ಗೋಪಿ 6
ಮಡದಿಯರೆಲ್ಲರು ಮಿಯುತಲಿರೆ ಮೈ |
ಉಡುಗೆಯ ತೆಗೆದುಕೊಂಡು ||
ಸಡಗರದಲಿ ಬೇಡಿಕೊಳ್ಳೆ ವಸ್ತ್ರಗಳನು |
ಕೊಡದೆ ಅಡವಿಗೆ ನಡೆದ 7
ಬೆಣ್ಣೆಯ ತಿಂದು ತಮ್ಮಣ್ಣಗೆ ತಾ ಕೊಟ್ಟು |
ಚಿಣ್ಣರ ಬಡಿವ ನೋಡೆ ||
ಬಣ್ಣಿಸಿ ನಮ್ಮ ಬಾಯಿಗೆ ಬೆಣ್ಣೆ ತೊಡೆಯುತ |
ಬೆಣ್ಣೆಯ ತಿಂದಿರೆಂಬ 8
ಏಣಲೋಚನೆ ಸರ್ಪವೇಣಿ ನಮ್ಮ ಮನೆ |
ಓಣಿಯೊಳಗೆ ಪೋಗುತ ||
ಕಾಣದಂತೆ ಚಕ್ರಪಾಣಿ ನಮ್ಮೊಳು ತನ್ನ |
ತ್ರಾಣವ ತೋರಿದನೆ 9
ಪದುಮನಾಭನು ಪುರದ ಚದುರಿಯರಿಗೆ ತಾನು |
ಮದನಶಾಸ್ತ್ರವ ಪೇಳುತ ||
ಮುದದೊಳಗಿರಲವರೊಡೆಯ ಬರಲು ಕೃಷ್ಣ |
ಕುದುರೆಯ ನೇರಿದನೆ 10
ಎಷ್ಟುಪದ್ರವ ಕೊಟ್ಟರು ಗೋಕುಲದೊಳು |
ಬಿಟ್ಟವನಿರಲಾರೆವೆ ||
ಸೃಷ್ಠಿಯೊಳಗೆ ಸರ್ವಾಭಿಷ್ಟದ ಪುರಂದರ-|
ವಿಠಲ ಸಲಹುವನೆ 11


No comments:

Post a Comment