Labels

Tuesday 31 March 2020

ಕೃಷ್ಣೇತಿ ಮಂಗಳಂ ದಿವ್ಯನಾಮ


ಕೃಷ್ಣೇತಿ ಮಂಗಳಂ ದಿವ್ಯನಾಮ ಪ
ಇಷ್ಟರಿಂದಲಿ ಭವಬಂಧನ
ನಷ್ಟವಾಗಿ ಹೋಹುದೋ ಅ.ಪ
ನಾರದಮುನಿ ತಾನು ನರಕ ಪಟ್ಟಣಕೆ ಹೋಗಿ
ವಾರೀಜನಾಭ ಎಂದು ಒದರಿದಾಗ ||
ಘೋರ ಪಾತಕವೆಲ್ಲ ದೂರವಾಗಿ ಹೋಯ್ತು
ಸೂರೆಯಾಯಿತು ಸ್ವರ್ಗಲೋಕವೆಲ್ಲ 1
ಅಜಮಿಳನು ಈ ನಾಮ ಅಂತ್ಯಕಾಲಕೆ ಸ್ಮರಿಸೆ
ನಿಜಪದವಿಯೈದಿದನು ನಿಮಿಷದಲಿ ||
ಭುಜಗಭೂಷಣನು ತಾ ಶ್ರೀರಾಮನಾಮವ
ನಿಜಕಾಂತೆಯನು ಕರೆದು ಉಪದೇಶವಿತ್ತ2
ಪಂಚಪಾಂಡವರನು ಪರಿಪಾಲಿಸಿತು ನಾಮ
ಪಾಂಚಾಲೀ ಮೊರೆ ಕೇಳಿ ಪೊರೆಯಿತು ನಾಮ ||
ವಂಚನೆ ಮಾಡಿ ಕೌರವರ ಮಡುಹಿ ನಿ -
ಶ್ಚಿಂತೆಯಲಿ ಪಾಂಡವರ ಪಟ್ಟಗಟ್ಟಿದ ನಾಮ 3
ಸರಸಿಯೊಳಗೆ ಮುಳುಗಿ ಅರಿಯ ಬಾಧೆಗೆ ಸಿಲುಕಿ
ಕರಿರಾಜ ಹರಿಯೆಂದು ಮೊರೆಯಿಡಲು ||
ತ್ವರಿತದಿಂದಲಿ ಬಂದು ಕರಿಯನುದ್ಧರಿಸುತ
ಕರಿರಾಜವರದನೆಂದೆನಿಸಿಕೊಂಡ ನಾಮ4
ಧ್ರುವ ತನ್ನ ತಂದೆ ತೊಡೆಯ ಮೇಲೇರಲು ಪೋಗೆ
ಅವನ ಮಲತಾಯಿ ಗರ್ಜಿಸಿದಳಾಗ ||
ಧ್ರುವ ಸುಖಬಿಟ್ಟು ವನಕೆ ಪೋಗಿ ತಪ ಮಾಡಿ
ಸವಿಯಾದಚಲಪದವ ಪಡೆದನಾಗ 5
ಹಿರಣ್ಯಕಶಿಪು ತನ್ನ ಮಗನ ಬಾಧೆಯ ಪಡಿಸೆ
ಗಿರಿಯ ಶಿಖರದಿಂದೀಡಾಡಲು ||
ನರಹರೆ ನರಹರೆ ರಕ್ಷಿಸೆಂದನ್ನಲು
ನರಸಿಂಹ ರೂಪದಿಂದವನ ಪಾಲಿಸಿದ6
ಕಂದನ ಅಪರಾಧವ ಕೇಳದೆ ನೃಪನು ತಾ
ನಂದತಿ ದಾರುಣ ಕಡಹದೋಳು ಕೆಡಹೆ ||
ಅಂದು ಸುಧನ್ವ ಶ್ರೀಕೃಷ್ಣನೆಂದೆನಲಾಗಿ
ಬೆಂದು ಕಂದಿವ ಎಣ್ಣೆ ತಣ್ಣೀರಾಯಿತು 7
ಅಸುರ ಬಾಧೆಗೆ ಸಿಲುಕಿ ಅಶೋಕವನದಲಿ
ಶಶಿಮುಖಿ ಬೀಜಮಂತ್ರವ ಜಪಿಸೆ ||
ಅಸುರನ ಕೊಂದು ಅಶೋಕವನವ ಬಿಡಿಸಿ
ವಸುಧೀ ಸುತೆಯ ಸಲಹಿದ ರಾಮನಾಮ 8
ಪರಿಪರಿ ಭಕ್ತರನು ಪಾಲಿಸಿತು ಈ ನಾಮ
ಪರಮ ಮಂಗಲವು ಪಾವನವು ಈ ನಾಮ ||
ಸುರರು ಬ್ರಹ್ಮಾದಿಗಳು ಸ್ರೋತ್ರ ಮಾಡುವ ನಾಮ
ಧರೆಯೊಳು ಸಿರಿ ಪುರಂದರ ವಿಠಲ ನಾಮ9


No comments:

Post a Comment