ಶಕ್ತನಾದರೆ ನಂಟರೆಲ್ಲ ಹಿತರು - ಅ
ಶಕ್ತನಾದರೆ ಆಪ್ತರವರೆ ವೈರಿಗಳು ಪ.
ಕಮಲಾರ್ಕರಿಗೆ ನಿರುತ ಕಡುನಂಟುತನವಿರಲು
ಕಮಲ ತಾ ಜಲದೊಳಗೆ ಆಡುತಿಹುದು
ಕ್ರಮತಪ್ಪಿ ನೀರಿನಿಂದ ತಡಿಗೆ ಬೀಳಲು ರವಿಯ
ಅಮಿತ ಕಿರಣಗಳಿಂದ ಕಂದಿ ಪೋಗುವುದು 1
ವನದೊಳುರಿ ಸುಡುತಿರಲು ವಾಯು ತಾ ಸೋಂಕಲ್ಕೆ
ಘನ ಪ್ರಜ್ವಲಸುತಿಹುದು ಗಗನಕಡರಿ
ಮನೆಯೊಳಿರ್ದಾ ದೀಪ ಮಾರುತನು ಸೋಂಕಿದರೆ
ಘನಶಕ್ತಿ ತಪ್ಪಿ ತಾ ನಂದಿ ಹೋಗುವುದು 2
ವರದ ಶ್ರೀ ಪುರಂದರವಿಠಲನ ದಯವಿರಲು
ಸರುವ ಜನರೆಲ್ಲ ಮೂಜಗದಿ ಹಿತರು
ಕರಿಯ ಸಲುಹಿದ ಹರಿಯ ಕರುಣ ತಪ್ಪಿದ ಮೇಲೆ
ಮೊರೆಹೊಕ್ಕರೂ ಕಾಯ್ವ ಮಹಿಮರುಂಟೇ ದೇವ 3
No comments:
Post a Comment