Labels

Wednesday 25 September 2019

ಅವಿಧವಾ ನವಮೀ Avidha Navami



*ಮಾತೃ ವಂದನಮ್*

" *ಅವಿಧವಾ ನವಮೀ - ಒಂದು ಚಿಂತನೆ* "

ಶ್ರೀ ವಾಯು ಪುರಾಣಾಂತರ್ಗತ ಶ್ರೀ ವೇದವ್ಯಾಸದೇವರು ಹೇಳಿದ " ಮಾತೃ ವೈಭವಮ್ ".

" ಅಮ್ಮ " ಎನ್ನುವ ಅಕ್ಷರದಲ್ಲಿ " ಅಮೃತ " ವಿದೆ.

" ಅಮ್ಮ " ಎಂಬ ಎರಡಕ್ಷರದಲ್ಲಿ ಅಪ್ಯಾಯತೆ - ಅಂತಃಕರಣ - ವಾತ್ಸಲ್ಯ ತುಂಬಿದೆ. "

ಅಮ್ಮ " ಅಂದರೆ.....

ಗಾಳಿಗೆ ಗೊತ್ತು. ನಕ್ಷತ್ರಗಳಿಗೆ ಗೊತ್ತು.

ಆ " ಚಂದಮಾಮ " ಬಲ್ಲ.

ಧರೆ ಬಲ್ಲಳು.

ಪ್ರೀತಿ - ತ್ಯಾಗ - ಸಹನೆ - ಧೈರ್ಯ - ಕಳಕಳಿಯ ರೂಪ ಅವಳು.

ಸಂಪೂರ್ಣ ಸ್ತ್ರೀ ಆದಾಗ ತನ್ನನ್ನು ಮರೆಯುತ್ತಾಳೆ.

ಬರುವ ಕಂದನನ್ನು ಮರೆತೂ ಮರೆಯಳು.

ಒಂದೊಂದು ಕ್ಷಣವನ್ನೂ ಅನುಭವಿಸುತ್ತಾಳೆ.

ಕಲ್ಪನೆ - ಸ್ಪರ್ಶ - ನೋವುಗಳು ಒಟ್ಟೊಟ್ಟಿಗೆ.

ಒಂದು ಆಕೃತಿಯ ರಚನೆಯನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತಾಳೆ.

ಹೊಟ್ಟೆ ತುಂಬಿದ್ದರೂ ತುಸು ಹೆಚ್ಚಾಗಿಯೇ ಆಹಾರವನ್ನು ತೆಗೆದುಕೊಳ್ಳುತ್ತಾಳೆ.

ಅಷ್ಟು ವರುಷ ತನಗಾಗಿ ತೋರದ ಕಾಳಜಿಯನ್ನು ಜೋಪಾನವಾಗಿ ಪ್ರಕಟಿಸುತ್ತಾಳೆ.

ಬಾಳಿನಲ್ಲಿ ಬಂದು ಹೋದ ಕೆಲವೇ ಕೆಲವು ನೆನಪುಗಳನ್ನು ಆಹ್ವಾನಿಸಿಕೊಳ್ಳುತ್ತಾ

ವಾಸ್ತವಿಕವಾಗಿ ಯಾವುದೇ ತೊಂದರೆ ಇದ್ದರೂ ಗಮನಿಸದೇ ಹಣನ್ಮುಖತೆಯೆಡೆಗೆ ಜಾರುತ್ತಾಳೆ.

ಎದ್ದಾಗ - ಬಿದ್ದಾಗ - ಒದ್ದಾಗ ಸದ್ದಾಗದಂತೆ ಅವಡುಗಚ್ಚುತ್ತಾಳೆ.

ಮಗುವಿಗಾಗಿ ನಗುತ್ತಾಳೆ.

ಸೃಷ್ಟಿಯಾದಾಗ ದೃಷ್ಟಿಸಿ ನೋಡುತ್ತಾ ಬಿಂಬ - ಪ್ರತಿಬಿಂಬ - ರೂಪ - ಅನುರೂಪಗಳ ಎಣಿಕೆಯ ಪ್ರಾಣಗಳನ್ನು ಕಣ್ಣಿನಲ್ಲಿ - ತುಟಿಯಲ್ಲಿ - ಕರಗಳಲ್ಲಿ - ಅಪ್ಪುಗೆಯಲ್ಲಿ - ಎದೆಯಲ್ಲಿ ತೋರುತ್ತಾಳೆ.

ಹಗಲು - ರಾತ್ರಿ - ನಿದ್ದೆ - ಆಯಾಸಗಳು ಅಲ್ಲಿ ಇಲ್ಲ!

ಅಲ್ಲಿರುವುದು ಬರೀ ಪ್ರೀತಿ!!!

ತನಗಾಗಿ ಬಂದ ಮಗು ದೇವರು ಕೊಟ್ಟ ಹೂವು.

ತಾಯ್ತನ ತುಂಬಿದ ಆ ಕಂದನನ್ನು ಎವೆಯಿಕ್ಕದೆ ಸಮಯದ ಪರಿವೆಯಿಲ್ಲದ ಕಣ್ತುಂಬಕೊಳ್ಳುತಾಳೆ..

ಆಕೆ ಅಮ್ಮ........ !!

ಅಮ್ಮ ಮೊದಲೇ?

ದೇವರು ಮೊದಲೇ?

ವೇದ ಹೇಳುತ್ತದೆ ಅಮ್ಮನೇ ದೇವರು!

ಆಕೆಗೆ ಮಗುವಿನ ನಾಡಿ ಮಿಡಿತ ಗೊತ್ತು.

ಉಸಿರಿನ ವೇಗ ಕೊಂಬೆ ಬಲ್ಲದು.

ಬಳ್ಳಿಗೆ ನೀರುಣಿಸುವಂತೆ ದೃಷ್ಟಿಯಾಗದಿರಲೆಂದು ಸೆರಗು ಮುಚ್ಚಿ ಅಮೃತ

ಕುಡಿಸುತ್ತಾಳೆ.

ಮಗು ನಿದ್ರಿಸುತ್ತೆ.

ತಾಯಿಯ ಮನ - ತನು ಎಚ್ಚರವಿರುತ್ತೆ.

ಮತ್ತೆ ಮತ್ತೆ ಏಳುತ್ತದೆ.

ತಾಯಿ ಇಂಪಾದ ದನಿ; ತೂಗುವಾಗ ಮಧ್ಯದಲ್ಲಿ ಬೇಕಂತಲೇ ಅಳುವುದು.

ಅಮ್ಮನ ಮೊಗ ಮತ್ತೆ ದಿಟ್ಟಿಸಲು ಆ ತಾಯಿಗೂ ಗೊತ್ತು ಮಗು ಆಟವಾಡುತ್ತಿದೆಯೆಂದು.

ಆದರ ಜೊತೆ ಆ ಮಾತೃ ಹೃದಯವೂ ಆಟವಾಡುತ್ತದೆ.

ಮಧುರ ಸ್ವರ, ಹುಸಿ ಮುನಿಸು, ತೋರೆಗೊಡದ ನಗು ಇಬ್ಬರಿಗೂ ಬೇಕು.

ಪ್ರಕೃತಿಯ ನಿಯಮದಂತೆ ಬೆಳೆಯುತ್ತದೆ.

ಆದರೆ ಆ ತಾಯಿ ಅಲ್ಲಿಯೇ ನಿಲ್ಲುತ್ತಾಳೆ.

ಕ್ರಮೇಣ ಮಾಡು ಮರೆತು ಬಿಡುತ್ತದೆ.

ಗೆಳತಿ - ಸಂಗಾತಿ ದೊರೆತಾಗ ಅಮ್ಮನಿಂದ ಅದು ಬಹು ದೂರ.

" ಮಾತೃ ಹೃದಯ ಮಮತೆ " ಯಿಂದ ಮನದಲ್ಲಿ ಮಗುವಿಗೆ ಜೋಕಾಲಿ ತೂಗುತ್ತಲೇ ಇರುತ್ತಾಳೆ.

ಅದು ನಿರಂತರ.

ಅಂಥಹಾ ಕರುಣಾಮಯಿಯಾದ ತಾಯಿ ಋಣವನ್ನು ತೀರಿಸಲು ಅಸಾಧ್ಯ!

ಆದುದರಿಂದ ಮುತ್ತೈದೆಯಾಗಿ ಮರಣ ಹೊಂದಿದ ತಾಯಿಗೆ " ಅವಿಧವಾ ನವಮೀ " ( ಯಂದೇ ಶ್ರಾದ್ಧ ಮಾಡಬೇಕು.

ಎಲ್ಲಿ ತಾಯಿಯ ಋಣದ ಪರಿಹಾರ ನೆನಿಸಿ 16 ಪಿಂಡಗಳನ್ನು ಇಡಲಾಗುತ್ತದೆಯೋ ಅದನ್ನು ನೆನೆಸಿಕೊಂಡಾಗ ಕರುಳು ಕಿವಿಚಿದಂತಾಗುತ್ತದೆ.

ಕಲ್ಲೆದೆಯ ಮನಸ್ಸು ಕೂಡಾ ಕರಗುತ್ತದೆ.

ನಿಮ್ಮ ತಂದೆ - ತಾಯಿಗಳು ನಿಮ್ಮನ್ನು ನೋಡಿಕೊಂಡಂತೆ ನೀವು ನಿಮ್ಮ ಮಕ್ಕಳನ್ನು ನೋಡಿಕೊಳ್ಳಲಾರಿರಿ.

ಅವರು ತಮ್ಮ ಸುಖವನ್ನು ತ್ಯಾಗ ಮಾಡಿ ನಿಮಗೆ ಸುಖ ಕೊಟ್ಟರು.

ಹೀಗಾಗಿ ಅರ್ಥ ತಿಳಿದು ಪಿಂಡ ಪ್ರದಾನ ಮಾಡಿ!!

ಶ್ರೀ ವೇದವ್ಯಾಸದೇವರು " ವಾಯುಪುರಾಣ " ದಲ್ಲಿ ಮಾತೃ ವೈಭವವನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ವಾಯುಪುರಾಣದಲ್ಲಿ ಶ್ರೀ ವೇದವ್ಯಾಸದೇವರು ತಾಯಿಯ ವೈಭವವನ್ನು ಸಜ್ಜನರ ಮಾಹಿತಿಗಾಗಿ...

ಗರ್ಭೇ ಚ ವಿಷಮೇ ದುಃಖಂ

ವಿಷಮೇ ಭೂಮಿವರ್ತ್ಮನಿ ।

ತಸ್ಯಾ ನಿಷ್ಕ್ರಮಣಾರ್ಥಾಯ

ಮಾತೃ ಪಿಂಡಂ ದದಾಮ್ಯಹಮ್ ।। 1 ।।

ನಾನು ಗರ್ಭದಲ್ಲಿರುವುದರಿಂದ ನಿನಗೆಷ್ಟು ಕಷ್ಟವಾಯಿತು? ಅತಿಥಿಗಳು ಮನೆಗೆ ಬಂದರೇನೇ ಮನೆಯವರ ಸ್ವಾತಂತ್ರ್ಯ ಹೋಗುವುದು. ಹೀಗಿರುವಾಗ 9 ತಿಂಗಳು ನಿನ್ನೊಳಗೆ ಬಂದುದರಿಂದ ನಿನ್ನ ದೇಹಕ್ಕೆ ಎಷ್ಟೊಂದು ವಿಕಾರವಾಯಿತು ಮತ್ತು ದುಃಖವಾಯಿತು. ಊಟವಾದಾಗ ತಿಂದಿದ್ದೆಲ್ಲಾ ವಾಂತಿ, ಹೊಟ್ಟೆ ಹೊತ್ತು ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ. ಮನೆ - ಸಮಾರಂಭ - ಸಮಾಜದಲ್ಲಿ ಮುಜುಗರವಾದರೂ ನನಗಾಗಿ ಅದನ್ನು ಸಹಿಸಿಕೊಂಡಿರುವ ನಿನಗೆ ನಮನ! ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಯಾವತ್ಪುತ್ರೋ ನ ಭವತಿ

ತಾವನ್ಮಾತುಶ್ಚ ಶೋಚನಮ್ ।

ತಸ್ಯಾ ನಿಷ್ಕ್ರಮಣಾರ್ಥಾಯ

ಮಾತೃ ಪಿಂಡಂ ದದಾಮ್ಯಹಮ್ ।। 2 ।।

ಗರ್ಭದಲ್ಲಿ ನಾನು ಹೊರಗೆ ಬರುವ ತನಕ ನಿನಗಾದ ಶೋಕಕ್ಕೆ ಕೊನೆಯಿಲ್ಲ. ಸಿಕ್ಕಾಪಟ್ಟಿ ತಿರುಗಾಡಲಾಗದು. ಮಗುವಿಗೆ ಏನಾದೀತೋ ಎಂಬ ಭಯ. ಅಡ್ಡಾದಿಡ್ಡಿಯಾಗಿ ಬಂದರಂತೂ ನನಗಾಗಿ ನಿನ್ನ ಪ್ರಾಣವೇ ಹೋದರೆ ಎಂಬ ಭಯ ಬೇರೇ. ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

No comments:

Post a Comment